ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಶ್ರೀಕೃಷ್ಣ ಯಕ್ಷ ಸಭಾ ಸಪ್ತಾಹ ಗೌರವಪಾತ್ರ ಕಲಾವಿದರು

ಲೇಖಕರು : ಎಲ್‌. ಎನ್‌. ಭಟ್‌ ಮಳಿಯ
ಶುಕ್ರವಾರ, ಜುಲೈ 4 , 2014
ಮಂಗಳೂರು ಕದ್ರಿಯ ಶ್ರೀಕೃಷ್ಣ ಯಕ್ಷಸಭಾ ಸಂಸ್ಥೆಯು ಪ್ರತಿ ವರ್ಷ ದಂತೆ ಈ ವರ್ಷವು ಸಪ್ತ ಕಲಾರತ್ನರನ್ನು ಗೌರವಿಸಲಿದೆ. ಜೂನ್‌ 30ರಿಂದ ಜುಲೈ 7ರವರೆಗೆ ಮಂಗಳೂರು ಪುರಭವನದಲ್ಲಿ ಉತ್ತಮ ಪೌರಾಣಿಕ ಪ್ರಸಂಗಗಳನ್ನು ಸಂಜೆಯ ವೇಳೆಗೆ ಕಾಲಮಿತಿಗೆ ಹೊಂದಿಸಿ ಪ್ರದರ್ಶಿಸುವುದರ ಜತೆಗೆ ಉಭಯ ತಿಟ್ಟುಗಳ ಕಲಾಸಾಧಕರನ್ನು ಸಮ್ಮಾನಿಸುತ್ತಿರುವುದು ಉಲ್ಲೇಖನಾರ್ಹ.

ಮಿಜಾರು ಮೋಹನ ಶೆಟ್ಟಿಗಾರ್‌

ತೆಂಕುತಿಟ್ಟಿನ ಅನುಭವಿ ಮದ್ದಳೆಗಾರರಲ್ಲಿ ಒಬ್ಬರಾದ ಇವರದು ನಾಲ್ಕು ದಶಕಗಳಿಗೂ ಮಿಕ್ಕಿದ ಕಲಾಸೇವೆ. ಕರ್ನಾಟಕ ಮೇಳದಲ್ಲಿ ಒಂಬತ್ತು ವರ್ಷ ತಿರುಗಾಟ ನಡೆಸಿ ಕಳೆದ 25 ವರ್ಷಗಳಿಂದ ಕಟೀಲು ಮೇಳದಲ್ಲಿ ಚೆಂಡೆ- ಮದ್ದಳೆ ವಾದಕರಾಗಿ ಪ್ರಸಿದ್ಧರು. ಅಣ್ಣು ಭಟ್‌ ಮತ್ತು ನೆಡ್ಲೆ ನರಸಿಂಹ ಭಟ್‌ ಇವರಿಗೆ ಮಾರ್ಗದರ್ಶಕರು. ಯಕ್ಷಗಾನ ಹಿಮ್ಮೇಳ ವಾದಕರಾಗಿ ಮಿಜಾರು ಮೋಹನ ಶೆಟ್ಟಿಗಾರರ ಸಾಧನೆಯನ್ನು ಗುರುತಿಸಿ ಶ್ರೀಕೃಷ್ಣ ಯಕ್ಷ ಸಭಾ ಸಮ್ಮಾನಿಸುತ್ತಿದೆ.

ಕಟೀಲು ಸೀತಾರಾಮ ಕುಮಾರ್‌

ಉತ್ತಮ ಹಾಸ್ಯಗಾರರಾಗಿ ಪ್ರಸಿದ್ಧರಾಗಿರುವ ಸೀತಾರಾಮ ಕುಮಾರ್‌ ಪ್ರೇಕ್ಷಕರನ್ನು ನಗೆಯ ಹೊನಲಲ್ಲಿ ತೇಲಾಡಿಸುವ ಚತುರ ಕಲಾವಿದ. ಮುಂಬಯಿಯ ಬ್ರಹ್ಮಶ್ರೀ ನಾರಾಯಣ ಯಕ್ಷಗಾನ ಮಂಡಳಿಯಲ್ಲಿ ತರಬೇತಿ ಪಡೆದು ವೃತ್ತಿಯಲ್ಲಿ ತೊಡಗಿದರು. ನಾಲ್ಕು ದಶಕಗಳ ರಂಗಾನುಭವ ಸಂಪನ್ನರು ಇವರು. ಕದ್ರಿ ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ ಹೊಸನಗರ ಮೇಳದಲ್ಲಿ ವೃತ್ತಿನಿರತರಾಗಿರುವ ಸೀತಾರಾಮ ಕುಮಾರ್‌ ಅವರಿಗೆ ಶ್ರೀಕೃಷ್ಣಲೀಲೆಯ ವಿಜಯ, ಶ್ವೇತಕುಮಾರ ಚರಿತ್ರೆಯ ಪ್ರೇತ ಹೆಸರು ತಂದುಕೊಟ್ಟ ಪಾತ್ರಗಳು. ಯಕ್ಷಗಾನ ಹಾಸ್ಯಕಲಾವಿದರಾಗಿ ಸೀತಾರಾಮ ಕುಮಾರ್‌ ಅವರ ಸಾಧನೆಯನ್ನು ಗುರುತಿಸಿ ಶ್ರೀಕೃಷ್ಣ ಯಕ್ಷ ಸಭಾ ಸಮ್ಮಾನಿಸುತ್ತಿದೆ.

ಮಧೂರು ರಾಧಾಕೃಷ್ಣ ನಾವಡ

ತೆಂಕುತಿಟ್ಟು ಯಕ್ಷಗಾನದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕಲಾವಿದರಾಗಿ ದುಡಿಯುತ್ತಿರುವ ರಾಧಾಕೃಷ್ಣ ನಾವಡರಿಗೆ ದಮಯಂತಿ ಪುನಃ ಸ್ವಯಂವರದ ಋತುಪರ್ಣ ಖ್ಯಾತಿ ತಂದುಕೊಟ್ಟ ಪಾತ್ರ. ಕೂಡ್ಲು ನಾರಾಯಣ ಬಲ್ಯಾಯರಿಂದ ನಾಟ್ಯಾಭ್ಯಾಸ ಮಾಡಿದ ನಾವಡರು ಸುರತ್ಕಲ್‌, ಬಪ್ಪನಾಡು, ಮಧೂರು, ಸಾಲಿಗ್ರಾಮ, ಮಂಗಳಾದೇವಿ, ಎಡನೀರು, ಕೂಡ್ಲು ಹೀಗೆ ವಿವಿಧ ಯಕ್ಷಗಾನ ಮಂಡಳಿ ಗಳಲ್ಲಿ ವೃತ್ತಿನಿರತರಾಗಿ ಜನಪ್ರಿಯರಾದವರು. ಶ್ರೀಕೃಷ್ಣ ಯಕ್ಷಸಭಾ ಇವರನ್ನು ಉತ್ತಮ ರಾಜ ವೇಷಧಾರಿ ಎಂಬುದಾಗಿ ಗೌರವಿಸುತ್ತಿದೆ.

ಸರಪಾಡಿ ಅಶೋಕ ಶೆಟ್ಟಿ

ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಕ್ರಿಯಾಶೀಲ ಕಲಾವಿದರಾಗಿ ಪ್ರಸಿದ್ಧರಾದ ಸರಪಾಡಿ ಅಶೋಕ ಶೆಟ್ಟಿಯವರದು ನಾಲ್ಕು ದಶಕಗಳಿಗೆ ಸಮೀಪದ ಕಲಾಸೇವೆ. ಅರ್ಜುನ, ದೇವೇಂದ್ರ, ರಕ್ತಬೀಜ, ಶತ್ರುಘ್ನ ಇಂದ್ರಜಿತು ಮೊದಲಾದ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಗುರು ಪಡ್ರೆ ಚಂದು ಅವರಿಂದ ನಾಟ್ಯ ಕಲಿತ ಭಾಗ್ಯಶಾಲಿ. ಕಟೀಲು, ಅಳದಂಗಡಿ, ಬಪ್ಪನಾಡು, ಬೆಳ್ಮಣ್ಣು, ಕದ್ರಿ, ಕರ್ನಾಟಕ, ಪುತ್ತೂರು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ಭಾರತೀಯ ಯಕ್ಷಗಾನ ಕಲಾಸಂಘ (ರಿ.) ಸರಪಾಡಿ ಇದರ ಸಂಚಾಲಕರು. ಶ್ರೀ ಕೃಷ್ಣ ಯಕ್ಷಸಭಾ ಇವರನ್ನು ಉತ್ತಮ ಕಿರೀಟ ವೇಷಧಾರಿ ಎಂಬುದಾಗಿ ಗೌರವಿಸುತ್ತಿದೆ.

ಸಿರಿಬಾಗಿಲು ರಾಮಕೃಷ್ಣ ಮಯ್ಯ

ಪೌರಾಣಿಕ ಪ್ರಸಂಗಗಳನ್ನು ಚೆನ್ನಾಗಿ ಮುನ್ನಡೆಸಬಲ್ಲ ಯುವ ಭಾಗವತರು ಇವರು. ಮೂರು ವರ್ಷ ಕಟೀಲು ಮೇಳ ಮತ್ತು ಕಳೆದ 26 ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲಿ ಭಾಗವತರಾಗಿರುವ ಮಯ್ಯರಿಗೆ 29 ವರ್ಷಗಳ ರಂಗಾನುಭವ ಇದೆ. ಹೈದರಾಬಾದಿನಲ್ಲಿ ಗಾನ ಗಂಧರ್ವ ಎಂದು ಅಭಿನಂದಿಸಲ್ಪಟ್ಟ ಸುಮಧುರ ಕಂಠದ ರಾಮಕೃಷ್ಣ ಮಯ್ಯರ ಗುರುಗಳು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು. ಇವರಿಗೆ ಉತ್ತಮ ಭಾಗವತರೆಂಬ ಪುರಸ್ಕಾರ.

ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ

ತೆಂಕು ಮತ್ತು ಬಡಗು - ಎರಡೂ ತಿಟ್ಟುಗಳಲ್ಲಿ ಬೇಡಿಕೆ ಇರುವ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಉತ್ತಮ ಸ್ತ್ರೀ ಪಾತ್ರಧಾರಿ. ಹೆರಂಜಾಲು ವೆಂಕಟರಮಣ ಗಾಣಿಗರಿಂದ ಕೆರೆಮನೆಯಲ್ಲಿ ಯಕ್ಷಗಾನ ಅಭ್ಯಾಸ ಮಾಡಿ ದರು. ಸುಧನ್ವಾರ್ಜುನದ ಪ್ರಭಾವತಿ ಇವರಿಗೆ ಪ್ರಸಿದ್ಧಿ ತಂದ ಪಾತ್ರ. ಭಸ್ಮಾಸುರ ಮೋಹಿನಿಯ ಮೋಹಿನಿ, ದಕ್ಷಯಜ್ಞದ ದಾಕ್ಷಾಯಿಣಿ ಮೊದಲಾದ ವೇಷಗಳನ್ನು ಮನಮೆಚ್ಚುವಂತೆ ನಿರ್ವಹಿಸುವ ಯುವ ಕಲಾವಿದ ಯಲಗುಪ್ಪರಿಗೆ 23 ವರ್ಷಗಳ ರಂಗಾನುಭವ ಇದೆ. ಪ್ರಕೃತ ಹೊಸನಗರ ಮೇಳದಲ್ಲಿ ವೃತ್ತಿ ನಿರತರು. ಶ್ರೀಕೃಷ್ಣ ಯಕ್ಷಸಭಾ ಇವರನ್ನು ಉತ್ತಮ ಸ್ತ್ರೀ ವೇಷಧಾರಿ ಎಂಬುದಾಗಿ ಸಮ್ಮಾನಿಸುತ್ತಿದೆ.

ವಾಟೆಪಡ್ಪು ವಿಷ್ಣು ಶರ್ಮ

ಶ್ರೀರಾಮ, ವಿಷ್ಣು, ಕೃಷ್ಣ ಮೊದಲಾದ ಪಾತ್ರ ಗಳನ್ನು ಚೆನ್ನಾಗಿ ಮಾಡಬಲ್ಲ ಯುವ ಯಕ್ಷಗಾನ ಕಲಾವಿದ ವಾಟೆಪಡ್ಪು ವಿಷ್ಣು ಶರ್ಮ. ಕಟೀಲು ಮೇಳದಲ್ಲಿ ಕಳೆದ 22 ವರ್ಷಗಳಿಂದ ವೃತ್ತಿ ಕಲಾವಿದರಾಗಿದ್ದಾರೆ. ಕೆ. ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರು ಇವರ ಗುರುಗಳು. ಒಳ್ಳೆಯ ಮಾತುಗಾರಿಕೆಯಿಂದಲೂ ಹೆಸರು ಪಡೆಯುತ್ತಿರುವ ವಿಷ್ಣು ಶರ್ಮರು ತಾಳಮದ್ದಳೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಉತ್ತಮ ಅರ್ಥಧಾರಿ.

ಮಿಜಾರು ಮೋಹನ ಶೆಟ್ಟಿಗಾರ್‌



ಕಟೀಲು ಸೀತಾರಾಮ ಕುಮಾರ್‌



ಮಧೂರು ರಾಧಾಕೃಷ್ಣ ನಾವಡ



ಸರಪಾಡಿ ಅಶೋಕ ಶೆಟ್ಟಿ



ಸಿರಿಬಾಗಿಲು ರಾಮಕೃಷ್ಣ ಮಯ್ಯ



ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ



ವಾಟೆಪಡ್ಪು ವಿಷ್ಣು ಶರ್ಮ







ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ